Friday, 17 May 2013

ಪೆದ್ದು-ಮುದ್ದು ಜೋಡಿ





















ಕೋಪಗೊಂಡ ನಿನ್ನ ಕೆನ್ನೆ ಮೋಹಗೊಂಡ ನನ್ನ -
- ಕಣ್ಣಿಗೇನೋ ಹೇಳುತ್ತಿದೆ ಅನರ್ಥ ಭಾಷೆಯಲ್ಲಿ
ಮೌನವಹಿಸಬೇಡ ಹೀಗೆ, ಏನನ್ನಾದರೂ ಗುನುಗು
ಬೈಗುಳವಾದರೂ ಸರಿಯೇ ಸ್ವಾಗತಿಸುವೆ ನಗುವಿನಲ್ಲಿ

ಕಾಯಿಸು ಈ ನಿರುದ್ಯೋಗಿಯ ಮರೆತು ಸಮಯ ಪ್ರಜ್ಞೆ
ಕಾಯುವಿಕೆಯಲ್ಲಾದರೂ ನಾ ನಿರತನಾಗುವಂತೆ
ರಾಮನಾಗಲಾರೆ, ನೀನಿದ್ದಂತೆಯೇ ಇಷ್ಟ ಪಡುವೆ
ಸ್ವೀಕರಿಸು ಒಪ್ಪುತ ನನ್ನ ಭರತನಂತೆ

ಎಣಿಸಲೇಕೆ ತಾರೆಗಳ? ಸೆಡ್ಡು ಹೊಡೆಯಬಲ್ಲ ನಿನ್ನ -
- ಕಣ್ಗಳನ್ನೇ ಮತ್ತೆ, ಮತ್ತೆ ಎಣಿಸುತ್ತ ಮಘ್ನನಾಗಲೇ ?!!
ಜೀವಮಾನವೆಲ್ಲ ನಿನ್ನ ಮುತ್ತಿಗಾಗಿ ಪರಿತಪಿಸಿ
ಸಿಕ್ಕ ವೇಳೆ ತಪಸ್ಸಿಗೆ ಅಲ್ಪ ಮುಕ್ತಿ ನೀಡಲೇ ??

ಎಟುಕದ ಮನದ ಕಿಟಕಿಯ ಬಾಗಿಲನ್ನು ತೆರೆದಿಡು
ಸಾಧ್ಯವಾದರೆ ಒಮ್ಮೆ ಇಣುಕಿ ನೋಡಿ ನಲಿಯುವೆ
ನಿನ್ನರಿಯುವ ತವಕ ನನಗೆ ನೀಗದ ಹಸಿವಾಗಿರಲಿ
ನನ್ನ ಬಾಳ ಸಕಲವನ್ನೂ ನಿನಗೊಪ್ಪಿಸಿ ಮರೆಯುವೆ

ದಿಟ್ಟದ ಮನ ಮುಟ್ಟುವ ತನ ಕಟ್ಟುವೆ ಹಾಡೊಂದನು
ಇತ್ತಣ ಭುವಿ , ಅತ್ತಣ ಗುರಿ ಹತ್ತುವೆ ಬಾನೆತ್ತರ
ನೀನಿರುವೆಯಾ ಹೇಳು ಅಜ್ಞಾತ ಗೆಳೆಯನ ಜೊತೆ ?
ನೀಡಬಲ್ಲೆ ನಿರಾಯಾಸದಿ ಬಾಳಿಗುತ್ತರ........


                                                --ರತ್ನಸುತ

Thursday, 16 May 2013

ಕುಡ್ಕುರ್ ಮಾತು

ಯಂಗ್ಟಾ  : ತ್ಯಾಪೆ ಕಾಲು ಹಾಕ್ಕೊಂಡ್ ಎಲ್ಲಿಗ್ ಹೊಂಟ್ಯೋ ಮಾರ?
ಮಾರ :  ಊರಾಚೆ ಸಾರಾಯ್ ಅಂಗ್ಡಿ ಮತ್ತೆ ತೆರ್ದೈತಂತೆ ಬಾರಾ!!
ಯಂಗ್ಟಾ : ಬ್ಯಾಡ ಕಣ್ಳಾ, ಬೀದೀಗ್ ಬೀಳ್ತಾವ್ ನಮ್ಗೊಳ್  ಸಂಸಾರ
ಮಾರ : ನಾಯ್ಕ್ರೆ ಅಪ್ಪ್ಣೆಕೊಟ್ಟೊರ್ ಬಿಡ್ಲಾ ಚಿಂತೆ-ಗಿಂತೆ ದೂರ
         
            ಒಂದ್ರುಪ್ಪಾಯಂಗ್ ಮೂವತ್ ಕೆ.ಜಿ ಅಕ್ಕಿ ಕೊಡ್ತೌರಂತೆ
            ಮಾಡಿದ್ ಸಾಲ ಎಲ್ಲಾ ಮೊನ್ನೆ ಮನ್ನಾ ಮಾಡೌರಂತೆ
            ಇನ್ನೈದ್  ವರ್ಸ ನೆಮ್ದಿ ನಿದ್ದೆ, ಸಾರಾಯೇ ಕೂಳು
            ಆಮೇಲ್ ಯೋಚ್ನೆಮಾಡಿದ್ರಾಯ್ತು ಸಂಸಾರ ಹೆಂಡ್ತಿ-ಮಕ್ಳು

ಯಂಗ್ಟಾ : ಯಾರ್ಲಾ ಅವ್ನು ಪುಣ್ಯಾತ್ಮ ಇಷ್ಟಕ್ಕೆಲಾ ಕಾರ್ಣ
ಮಾರ : ಗೊತ್ತಿಲ್ವಾ? ನಮ್ ಹೊಸ ಸಿ.ಎಮ್ಮು  "ಸಿದ್ದ್ರಾಮಣ್ಣ"


                                                       --ರತ್ನಸುತ

Wednesday, 15 May 2013

ರಾಗಿ ಮುದ್ದೆ ಮಹಿಮೆ

















ಕುದಿ ನೀರು ಹತ್ತು ನಿಮಿಷ ತಂಗಲನ್ನದೊಟ್ಟಿಗೆ
ಹಿಟ್ಟು ಸಿಂಪಡಿಸಿ ಉಕ್ಕಬೇಕು ತಕ್ಕ ಮಟ್ಟಿಗೆ
ಉಕ್ಕೋ ವೇಳೆ ನೀರಿನಷ್ಟು ಸಮಭಾಗದ ಹಿಟ್ಟು ಬೆರೆಸಿ
ಮತ್ತೇ ಬಿಡಬೇಕು ಹತ್ತು ನಿಮಿಷ ಕುದಿವ ಪಾಡಿಗೆ

ಗಂಜಿಗಿಂತ ಚೂರು ಧಟ್ಟ ಇರುವುದು ಮೊದಮೊದಲಿಗೆ
ಹಿಟ್ಟುಗೋಲು ಆಡಿಸಿ ಸುಮಾರು ಹೊತ್ತು ಮೆಲ್ಲಗೆ
ತೀರಾ ಧಟ್ಟವಾದರೆ ಚೂರು ಕುದಿನೀರು ಬೆರೆಸಿ
ತೆಳುವಾದರೆ ಮತ್ತೆ ಬೆರೆಸಿ ಚೂರು ಹಿಟ್ಟು ಘಟ್ಟಿಗೆ

ಬೆಂದ ಹಿಟ್ಟ ಇಳಿಸಿ ಒಲೆಯ ಬೆಂಕಿಯಿಂದ ದೂರಕೆ
ಗಂಟು ಬೀಳದಂತೆ ಕಲೆಸಿ ಹಿಟ್ಟುಗೋಲ ಹಿಂಡಿಗೆ
ಕೊರೆದು ಬಿಲ್ಲೆಯಲ್ಲಿ ಚೆಲ್ಲಿ ತೊಳೆಸು ಕಲ್ಲು ಪೀಟಕೆ
ನಂತರ ಬಿಸಿ ಮುದ್ದೆ ತೊಳೆಸಿ ಚಂಡಿನಂತೆ ಗುಂಡಗೆ

ಬಿಸಿ ಇದ್ದಾಗಲೇ ಇಳಿಸಿ ಊಟದ ತಟ್ಟೆಗೆ
ಬಸ್ಸಾರು ಬಿಸಿ ಅದ್ದಿಗೆ, ಪಲ್ಯ ಜೊತೆಗೆ ನೆಂಜಿಗೆ
ನಾಲಿಗೆಯಿಂದಿಳಿದ ಬಿಸಿ ತುತ್ತು ಅನ್ನನಾಳ ಸೀಳಿ
ಸೇರುವುದು ಕೊನೆಗೆ ಕಾದಿದ್ದ ಹಸಿದ ಹೊಟ್ಟೆಗೆ

ಉಳಿದ ಮುದ್ದೆ ವ್ಯರ್ಥವಲ್ಲ ಚೆಲ್ಲದಿರಿ ಕಲ್ಗಚ್ಚಿಗೆ
ಮೊಸರು ಬೆರೆಸಿ ಚಂದ ಹಿಚುಕಿ ಮಸಾಲೆಯೊಟ್ಟಿಗೆ
ಈರುಳ್ಳಿ, ಮೆಣಸಿನಕಾಯೊಗ್ಗರಣೆ ಬಿದ್ದರೆ
ನಳಪಾಕವಾದರೇನು ಶರಣೆಂಬುದು ಅಂಬಲಿಗೆ

ಬಣ್ಣ ಕಂಡು ಜರಿದ ರೊಟ್ಟಿ ಸಿಕ್ಕವರ ಪಾಲಿಗೆ
ಮರೆತಿರುವರು ಸಂಸ್ಕೃತಿಯ ಇಂದಿನ ಯುವ ಪೀಳಿಗೆ
ರುಚಿಯರಿತು ಆಸ್ವಾದಿಸುವವರ ನಾಲಿಗೆಗೆ ಇದು
ಮೂರುಹೊತ್ತು ಹಬ್ಬದೂಟ, ರುಚಿಬರಿತ ಹೋಳಿಗೆ ........


                                                    --ರತ್ನಸುತ

Tuesday, 14 May 2013

ಧರ್ಮ- ನನಗೆ ತಿಳಿದ ಮಟ್ಟಿಗೆ

ಅತ್ತು ಕರೆಯುವುದು ಕಂದಮ್ಮನ ಧರ್ಮ
ಅಳುವ ಮುನ್ನವೇ ಉಣಿಸುವುದು ತಾಯ ಧರ್ಮ
ಧರ್ಮವನು ಪರಿಪಾಲಿಸಲು  ಇವರೀರ್ವರಿಗೆ
ಕೊಟ್ಟನಾ ಬಂಧನದ ಹೆಸರ ಆ ಬ್ರಹ್ಮ ?!!

ಚಿಗುರುವುದು ಹೂ-ಕಾಯಾಗುವ ಧರ್ಮ
ಉಗಮಿಸುವುದೇ ಕಾಯ ಉದುರಿನ ಧರ್ಮ
ಮಸಣದಲಿ ಮಣ್ಣಾಗುವ ಕೊಳೆತ ದೇಹಗಳು
ತೊಟ್ಟಿಲಿಗೆ ನೀಡಲಿ ಮತ್ತೊಂದು ಜನ್ಮ

ಕರಗುವುದು ಮೋಡಗಳ ಸಹಜ ಧರ್ಮ
ಹನಿಯುವುದ ಅನುಭವಿಸುವುದು ಮಣ್ಣ ಧರ್ಮ
ಕೊಡುವುದನು ಪಡೆದು, ಹಿಂದಿರುಗಿಸುವ ತತ್ವ
ಸಮತೋಲನದ ತಕ್ಕಡಿಯ ಹಿಡಿದ ಪ್ರೇಮ

ಅವರೆನ್ನುವುದು ನನ್ನ ನನ್ನತನದ ಧರ್ಮ
ನಾನೆನ್ನುವುದು ನಾನೇ ಶೃಷ್ಟಿಸಿದ ಧರ್ಮ
ಅವರೊಡನೆ ನಾನು, ಅವರವರೊಡನೆ ಅವರು-
-ನನ್ನೊಡನೆ ಬೆರೆತರೆ ಶಾಂತಿ ಧಾಮ

ಗೀಚುವುದು ಲೇಖನಿಗೆ ಬೆರಳಿನ ಧರ್ಮ
ಹೊರಳುವ ಬೆರಳಿಗೆ ಮನಸಿನ ಧರ್ಮ
ಅಚ್ಚಾಗಿ ಮೂಡಿದ ಪದಮಾಲಿಕೆಗೆ ಇಡಲೇ
ಓದುಗರ ಕಣ್ಮನ ಸೆಳೆಯುವ ನಿಯಮ?

                                       --ರತ್ನಸುತ


Monday, 13 May 2013

ಹಸಿವನೋಡಿಸುವ್ಹಸಿವು























ಹೊರ ಬನ್ನಿ ಮನೆ ಬಿಟ್ಟು, ಮನೆ ದೇವರಿಗೆ ಬೊಟ್ಟು -
-ಕೈ ಮುಗಿದು ಹೂವಿಟ್ಟು, ದೀಪ-ಧೂಪವ ಸುಟ್ಟು 
ಹಿಡಿದ ಕೊಡಲಿಯ ಹಲ್ಲು, ಮುರಿದು ಬೀಳಲಿ ಇಂದು 
ಬಳ್ಳ-ಪಾವಿನ ಅಳತೆ, ಬೆಸ್ತು ಬೀಳಲಿ ನೊಂದು 

ಒಲೆಯ ಕಾವಿಗೆ ಆಂಟಿ ಉಳಿದ ಮನೆ ಹೆಂಗಸರ -
- ಹೊರಡಿಸಿ, ಕೆಂಡ ಭೂದಿಯ ಕಂಡು ನಲಿಯಲಿ 
ತಂಗಲು ಗಂಜಿಗೆ ಬೆರೆಸಿ ತಿಳಿ ಮಜ್ಜಿಗೆ 
ಈರುಳ್ಳಿ, ಖಾರ ಮೆಣಸಿನಕಾಯಿ ನೆಂಜಿಗೆ 

ಮಾಸಲಂಗಿಯ ತೊಟ್ಟು, ತಲೆಗೆ ಪೇಟೆಯ ಸುತ್ತು 
ಹಸಿರು ಪಚ್ಚೆಯ ಕಂಡು, ಬಿರಿದ ಒಡೆಯನ ಘತ್ತು 
ಕೊಡಲಿ ಏಟಿಗೆ ಸಿಕ್ಕ, ಧಿಟ್ಟ ಪೈರಿನ ನಿಲುವು 
ಧೀರ್ಘ ದಂಡದ ವರಸೆ, ಭುವಿಗಪ್ಪುಗೆಯ ಒಲವು 

ಶಿರವೆರಿದನ್ನಪೂರ್ಣೆಯ ರೂಪಕ ದವಸ 
ಕಣದ ಶುಭ್ರ ನೆಲ, ಗುಡುಬಂಡೆಗೆ ಕೆಲಸ 
ತೆನೆ ಪೈರು ಒಣಗಿದೆ, ಬಡಿ-ಬಡಿಯೇ ಚೆಲ್ಲಿದೆ 
ಧಾನ್ಯ ರೂಪದ ಚಿನ್ನ ಹೊಳೆಯುವ ರಾಶಿ 

ಬಳ್ಳ ತೂಗಿತು ಹೊಟ್ಟೆ ತುಂಬಿಕೊಳ್ಳುವವರೆಗೆ 
ನೀಡಿತು ಮಿಕ್ಕವನು ಮತ್ತೊಂದು ಹೊಟ್ಟೆಗೆ 
ಧಿಕ್ಕು ಪಾಲಾಗಿ  ಹರಿದ ಬಂಜರು ಬಾಳು 
ಕೂಡಿಕೊಂಡಿತು ಸಧ್ಯ ತಾ ತಕ್ಕ ಮಟ್ಟಿಗೆ 

ಹೊಸ ಉಡುಗೆ ಹಬ್ಬಗಳ ಸಂಭ್ರಮಕೆ ಕಾರಣ 
ಹಸಿದ ಮಣ್ಣಿಗೆ ಚೆಲ್ಲಿ ಗೊಬ್ಬರದ ಹೂರಣ 
ಬರಲಿ ಮಳೆ ಕೈಸೇರಲಿ ಮತ್ತೆ ಫಸಲು 
ದೇಶ ಪುಷ್ಟಿಯಾಗಲಿ, ಇರದ್ಹಸಿವಿನ ದಿಗಿಲು 


                                           --ರತ್ನಸುತ 

Saturday, 11 May 2013

ತುಂಡಲೆಗಳು ತೊರೆದ ಕ(ವಿ)ತೆ


















ಮತ್ತದೇ ಮಾತು, ಮತ್ತದೇ ಜಗಳ
ಪರಿಚಯದ ಹೊಸ್ತಿಲಲಿ ಹೀಗಿರಲಿಲ್ಲ
ಮತ್ತದೇ ಮೌನ, ಮತ್ತದೇ ವಿರಸ
ನಡುವೆ ಬೆಳೆದ ಅಂತರ ಕರಗಲಿಲ್ಲ

ಮತ್ತದೇ ಮುನಿಸು, ಮತ್ತದೇ ಕೊರಗು
ಒಬ್ಬರಿಗೊಬ್ಬರು ನೆರವಾಗಬೇಕಿತ್ತು
ಮತ್ತದೇ ಜಿದ್ದು, ಕ್ಷಮೆಗಿಡದ ಸದ್ದು
ಮನಸ್ತಾಪದೊಳಗೊಂದು ವಿಷಬರಿತ ತುತ್ತು

ಅದೃಶ್ಯ ಪ್ರೀತಿ, ಆಲಸ್ಯ ಬಾಳ್ವೆ
ದಿಂಬಿಗೂ ಮಂಚಕೂ ದೂರದಲ್ಲೇ ಸರಸ
ಮಾರುದ್ದ ಸಹನೆ, ಊರುದ್ದ ಕಿಚ್ಚು
ನಗುವನ್ನೇ ಬಿಂಬಿಸದ ಕನ್ನಡಿಯ ಕಳಶ

ಇಬ್ಬಾಗ ಕೋಣೆ, ಮುಂಬಾಗ ಮುಸುಕು
ಜ್ವಲಿದ ಬೆಂಕಿಗೆ ಮಣಿದ ಆತ್ಮಾನುಬಂಧ
ಅತಿ ವೇಗ ಕೋಪ-ಶರ, ಇಂಪಿಸದ ಪ್ರೇಮ ಸ್ವರ
ಅರ್ಥ ಕಳೆದುಕೊಂಡ ಋಣಾನುಬಂಧ

ಕಾಮದೋಣಿಯ ಬಿರುಕು, ಜೀವ ವೀಣೆಯ ಮಿಡಿತ -
- ಕರ್ಕಶದ ಜೋಳಿಗೆಯ ತುಂಬು ಕವಳದ ಕಾಳು
ಮಾನವೀಯತೆ ಮರೆತ ಕೆನ್ನೆಗಂಟಿದ ಬೆರಳು
ಒಗ್ಗೂಡಿ ವಿಚ್ಛೇದಿಸಲು ಹೋರಟ ಬಾಳು

ವೇದ ಘೋಶದ ನಡುವೆ ಬೆಸೆದ ನಂಟಿನ ಗಂಟು
ವಾದ ಮಂಡನೆ ಮುಂದೆ ಸಡಿಲಗೊಂಡಿರಲು
ನ್ಯಾಯ ದೇವತೆಯೂ ಒಮ್ಮೆ ಕಣ್ಬಿಟ್ಟು ನೋಡಿದಳು
ಪರಿಚಯದ ಅಪರಿಚಿತ ಎರಡು ದೇಹಗಳು

ಹರಿದು ತೀರದ ಎರಡು ತುದಿ ಸೇರಿತು ಅಲೆ
ಇದ್ದ ಪ್ರೇಮ ಕಡಲ ತವರನ್ನು ತೊರೆದು
ಎಂದಾದರು ಮುಂದೆ ಒಂದಾಗಬಹುದೇ?
ಪ್ರಶ್ನೆಯೊಂದಿಗೆ ನಿಲ್ಲಿಸಿದೆ ಇಷ್ಟು ಬರೆದು......


                                                  --ರತ್ನಸುತ


Friday, 10 May 2013

ಕತ್ತಲ ಮರೆ ಆಟ

















ಒಂದು ನಿರ್ವಿಕಾರ ತುಂಬು ಕತ್ತಲು ಆವರಿಸಿದ-
-ಏಕಾಂಗಿ ಕೋಣೆ 
ಒಂದು ಬದಿಗೆ ಚತುರ ಕುವರ 
ಮತ್ತೊಂದು ಬದಿಯಲಿ ಮೌನ ಚತುರಿ 

ಗುಟ್ಟಿನ ಪದ ಪಿಸುಗುಟ್ಟಿಗೆ 
ಶುರುವಾಯಿತು ಕುರುಡು ಸಂದರ್ಶನ 
ಇರದ ಆಕಾರದ ಊಹೆ 
ಧನಿಯ ಧಾಟಿಗೆ ಹುಸಿ ದರ್ಶನ 

ಗೊಂದಲದಲಿ ಮೊದಲಾಗಿ 
ಸುದಾರಿಸಿದ ಮಾತಿನ ಮುಂದೂಡಿಕೆ 
ಒಬ್ಬೊಬ್ಬರ ಪರಿಚಯಾಕಾಂಕ್ಷ ಮಾತು 
ಮತ್ತೊಬ್ಬರ ವಿಚಾರ ಹೊದಿಕೆ 

ಭಾವುಕತೆಯ ಕಥೆಯ ಅಂಚಲಿ 
ಜಾರಿದ ಬಿಕ್ಕಳಿಕೆ ಸದ್ದು 
ದೂರುಳಿದೇ ಮುಂದಾದ ಕೈಗಳು 
ಗಾಳಿಯನ್ನೇ ಮಾಡಿದವು ಮುದ್ದು 

ಎಲ್ಲೋ ಮೊದಲಾದರೂ ಕೊನೆಗೆ 
ಒಮ್ಮತದಲ್ಲೇ ತಲುಪಿದ ವಾದ
ಅಪಸ್ವರದ ನಡುವೆಯೂ 
ಹೊಂದುತ್ತಲಿದ್ದ ಜೋಡಿ ನಾದ 

ನೋಡು-ನೋಡುತ ವಾಲಿಕೊಂಡರು 
ಇದ್ದಲ್ಲಿಯೇ ಈರ್ವ ಮಡಿಲುಗಳಲ್ಲಿ 
ಹೆಚ್ಚು ಕಾಲ ಉಳಿಯದ ಸಡಗರ 
ಘೋರ ಬೆಳಕು ಹರಿಯಿತಲ್ಲಿ 

ನೋಟ ಬೆರೆಯಿತು, ಊಹೆ ಹುಸಿಯಿತು 
ಅಂತರವು ಅನಂತವಾಯಿತು 
ಕತ್ತಲಿಟ್ಟ ಸಿರಿಯ ಸಂಭ್ರಮ 
ಬೆಳಕು ಹರಿದು ಕಸಿಯಿತು 

ಅಭಿಪಾಯ ಬಿನ್ನವಾಗಿ, ಅಭಿರುಚಿಗಳು ಖಿನ್ನವಾಗಿ 
ವಿರಹವೇ ಆವರಿಸಿತು, ಮಾತು-ಮಾತಿಗೆ ಮೂಡಿ ಮುನಿಸು 

ಕುರುಡು ಕತ್ತಲೇ ಹಿತವಾಗಿರಲು, ಬೆಳಕು ಬಾಳನು ಮಿತವಾಗಿಸಿತು 
ನಗ್ನವಾಯಿತು ಸತ್ಯ, ಭಘ್ನವಾಯಿತು ಕಂಡ ಕನಸು.... 


                                                 --ರತ್ನಸುತ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...