Friday, 20 February 2015

ಕ್ಷಮೆಯಿರಲಿ ಎಂದಿನಂತೆ

ಅಷ್ಟು ಸುಲಭವಲ್ಲ
ಕವಿತೆಗಳನ್ನ ಮಾರುವುದು
ಸಾಧಾರಣ ಸರಕನ್ನ
ಯಾರೂ ಮೂಸುವುದಿಲ್ಲ

ಅಲ್ಲಿ ಒಂದಿಷ್ಟು ವಿವಾದದ ಕಿಚ್ಚು
ಅಸ್ಮಿತೆಗಳ ಅನಾವರಣ
ಮೌಢ್ಯಗಳ ಛೀಮಾರಿ
ಧರ್ಮದ ತಳಿತ
ದೇವರುಗಳ ತುಳಿತವಿರದಿದ್ದರೆ
ಅದು ಬಲು ಹಗುರ
ಸಪ್ಪೆ ಅನಿಸುವ ಸಂಕಲನ

ಪ್ರೇಮ, ನೋವು, ಏಕಾಂತ
ಹಳೆ ಗುಜರಿ ಮಾಲುಗಳು
ಸೇಲಾಗುವುದಿರಲಿ
ಸೋಂಕಿಸಿಕೊಳ್ಳಲೂ ಅನರ್ಹ

ಮೂಲೆಗುಂಪಾದವುಗಳ
ಒಂದಿಷ್ಟು ಪೇರಿಸಿ
ಹೊಸತೇನನ್ನೋ ಕಟ್ಟುವ ಆಸೆ,
ಹಿಂದೆಯೇ ಹತಾಶೆ


ನಡುವೆಯೂ ಒಂದು ಕವನ
ಕೊನೆಗೊಳ್ಳದೆ ಮುಗಿದು
ಮಣ್ಣ ಹಿಡಿಯಲ್ಲಿ ಶಪಿಸುವಾಗ
ಕಣ್ಣು ತೇವಗೊಳ್ಳುವುದು ಸಹಜ

ಹೀಗೂ ಹೊಮ್ಮಿದ ಕವನಕ್ಕೆ
ಕ್ಷಮೆ ಕೋರುತ್ತ ಚುಕ್ಕೆ ಇಟ್ಟೆ,
ನಮ್ಮಯ ಹಕ್ಕಿ ಇಗೋ

ಬಿಟ್ಟೇ ಬಿಟ್ಟೆ!!

-- ರತ್ನಸುತ

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...