Friday, 20 February 2015

ಪ್ರಶ್ನೆ ಪತ್ರಿಕೆ

ಕಾಯಿಸಿ ಕವೇರಿದ ಎದೆ ಮೇಲೆ
ನೀರ ಅದ್ದಿ ಸಹಿ ಹಾಕಿದವಳೇ
ಹಿಂದೆಯೇ ಅಳಿಸಿಹೋದದ್ದು
ಕಣ್ಣಿಗೆ ಬೀಳದಷ್ಟು ಅಮಾಯಕಳಾದೆಯಾ?

ಉಸಿರು ಸೋಕುವಷ್ಟು ಸನಿಹ
ಇನ್ನೂ ಸನಿಹ ಬಂದಮೇಲೂ
ಅನುಮಾನಕೆ ಮಣೆಯ ಹಾಕಿ

ಒಂದೂ ಸುಳುವು ನೀಡದಂತೆ ದೂರ ಸರಿದೆಯಾ?

ಉಗುರು ಬೆಚ್ಚಗಿನ ಒಲವಲಿ
ಯಾವ ಬೇಳೆ ಬೇಯದು,
ಬೆಂದರದು ವಿರಹದಲ್ಲಿ

ಸತ್ಯವ ಅರಿವ ಮೊದಲೇ ಹಾರಿಹೋದೆಯಾ?

ಕಾಲು ದಾರಿಗಳಿಗಾವ ನೇಮ?
ಪಡೆದದ್ದೇ ಬದಿ, ನಡೆದಲ್ಲೆ ಗುರಿ

ಅಲ್ಲೂ ಗುರುತಿನ ಚಿನ್ಹೆ ಅಳಿಸಿ
ಕುರುಡಾಗಿಸಿ, ಕಡೆಗಣಿಸಿ ಜಾರಿಕೊಂಡೆಯಾ?

ಒಪ್ಪಿದ ಮನಸನು ಸೀಳಿ
ಇಣುಕಿ ನೋಡುವ ಚಾಳಿ
ಕಲಿತದ್ದಾದರೂ ಎಲ್ಲಿ?
ಮರು ಜೋಡಣೆ ಬೇಕನಿಸಿದೆ, ಕೇಳಲಾರೆಯಾ?


ಇಟ್ಟ ಪ್ರಶ್ನೆಗಳೆಲ್ಲ ಹಾಗೇ ಇವೆ
ಬಿಟ್ಟ ಖಾಲಿ ಸ್ಥಳಗಳನ್ನು
ಅನುಕಂಪದಿ ಸೋಕಿ ಹೊಗು
ಉತ್ತರಿಸುವ ಮನಸಾದರೆ ತಿರುಗಿ ನೋಡೆಯಾ?

ಮರಳ ಮೇಲೆ ಗೀಚಿ ಅಲೆಯು
ಅಳಿಸಿದಂಥ ಗುಟ್ಟುಗಳಿಗೆ
ಜೋಡಿ ಗುಟ್ಟುಗಳ ಹಂಬಲ
ಗುಟ್ಟಾಗಿಯಾದರು ನನ್ನ ಪ್ರೀತಿ ಮಾಡೆಯಾ?

-- ರತ್ನಸುತ

1 comment:

  1. ಅವರಿಗೋ ಪ್ರಶ್ನೆಗಳನು ಉತ್ತರಿಸಲೂ ಇಲ್ಲ ವ್ಯವಧಾನ
    ಅವರ ನೆನಪುಗಳಲೇ ಬದುಕನೆಳೆವ ನಮಗದೇ ಧ್ಯಾನ!

    ReplyDelete

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...