Saturday 28 February 2015

ನನ್ನಿಂದ ದೂರಾಗಿ

ಇದ್ದ ಕೊಂಡಿ ಕಳಚಿ
ಬಿದ್ದ ಸುಮಾರು ಅಹಂಗಳ
ಮೇಲೆತ್ತಲಿಕ್ಕೂ ಮುಜುಗರ
ಮುಂದೆ ಸಾಗುತ್ತಿದ್ದಂತೆ
ಹಿಂದೆ ನೆರಳು ಅದೇನನ್ನೋ ಸೂಚಿಸಿ
ಸಂತೈಸಿದಂತೆ ಕಂಡು
ವಿಕಾರವಾಗಿ ರೇಗಿದೆ
ನೆರಳು ಎಂದೂ ನನದಾಗಿರಲಿಲ್ಲ
ಸದಾ ನನ್ನ ಬಿಟ್ಟೇ ನಿಲ್ಲುತ್ತಿತ್ತು
ಔಪಚಾರಿಕ ಸ್ಪರ್ಶಕೆ ಒದಗಿ
ಅಲ್ಲಲ್ಲಿ ಚಿಗುರಿಕೊಂಡ
ನನ್ನವೇ ಸಂತತಿಗಳ ಕತ್ತರಿಸಿದ್ದು
ವ್ಯಾಪಕವಾಗಬಹುದಾದ ಆತಂಕದಿಂದ
ಕಿರಿದಾದ ಆಕಾಶವ ತಲುಪಲಾರದೆ
ಅಂತರದ ನೆಪವೊಡ್ಡಿ ನಿಂತ
ನಿಸ್ಸಹಾಯಕ ಕೈಗಳ ಕತ್ತರಿಸಿಕೊಳುವೆ
ಸೋತಾಗಿನ ನೆಪಗಳು ನಿಜಕ್ಕು ಅಸಡ್ಡೆಕಾರಿ
ದಿಂಬಿಗೆ ಒಣಜಂಭದ ಕೊಂಬು
ಕನಸುಗಳ ರಾಯಭಾರಿ ತಾನೇ ಎಂದು,
ನಾ ಚಾಪೆಯಡಿ ನುಸುಳಿ
ಬರಿ ನೆಲವ ನಂಬಿದೆ
ಆಗಲೇ ಆಕಾಶ ನಕ್ಕದ್ದು
ಭೂಮಿ ಮುನಿಸಿಕೊಂಡದ್ದು
ನನ್ನ ನಿರ್ಲಿಪ್ತತೆ ನಿಮಿತ್ತವಲ್ಲ
ನಿತ್ರಾಣ ನೆನಪುಗಳೇ ಆಗಿರಬಹುದು,
ಬಿಟ್ಟು ಹೋದ ನೆನ್ನೆಗಳು
ನಾಳೆಗಳ ತಲೆ ಕೆಡಿಸಿ
ಮತ್ತೆ ನನ್ನ ನಾನಾಗಿಸಬಹುದು
ಯಾವುದಕ್ಕೂ ಎಚ್ಚರವಿರಬೇಕು
ನನ್ನಿಂದ ದೂರುಳಿದು!!

                                     -- ರತ್ನಸುತ

1 comment:

  1. 'ನೆರಳು ಎಂದೂ ನನದಾಗಿರಲಿಲ್ಲ
    ಸದಾ ನನ್ನ ಬಿಟ್ಟೇ ನಿಲ್ಲುತ್ತಿತ್ತು'
    ಮನಸೆಳೆಯಿತು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...