Saturday 28 February 2015

ಸಮರ್ಥನೆ

ಮಾತೆ ಹಾಗು ಸಂತ
ಹಾಗೇ ಒಮ್ಮೆ ಚಹ ಕೂಟದಲ್ಲಿ
ಜ್ಞಾನ-ಅಜ್ಞಾನ, ಧರ್ಮ-ಅಧರ್ಮದ ಕುರಿತು
ಸಮಾಲೋಚಿಸುತ್ತ ಕೂತಿರುತ್ತಾರೆ
ಧರ್ಮದ ವ್ಯಾಖ್ಯಾನವನ್ನ ಬಿಡಿಸಿ ಹೇಳಲು
ಇಬ್ಬರೂ ಪದಗಳ ಮೊರೆ ಹೋಗದೆ
ಕಾರ್ಯ ರೂಪಕ ವಿನಿಮಯ ನಡೆಸಿದರು,
ನಡುವೆ ಚಹಾಕ್ಕೆ ಸಕ್ಕರೆ ಸಾಲದಾಗಿತ್ತು
ಇಬ್ಬರೂ ಮೌನ ಮುರಿಯದೆ ಸೇವಿಸುತ್ತಲೇ ಇದ್ದರು
ಯಾರೊಬ್ಬರು ದನಿಯೆತ್ತಿದ್ದರೂ ಸಣ್ಣವರಾಗುತ್ತಾರೆ
ಚಹ ತಯಾರಿಸಿದವನೆದುರು,
ಇದೇ ಅವಕಾಶವೆಂದು ಕಣ್ಣರಳಿಸಿ
ಕಪ್ಪು ಚುಕ್ಕೆ ಬಳಿಯಲು ಕಾದವರ ನಡುವೆ ನೂಕು ನುಗ್ಗಲು
ಚಹ ಮುಗಿಯುತ್ತ ಬಂದಂತೆ ಸಿಹಿ ಹೆಚ್ಚಿತು
ತಳದಲ್ಲಿ ಉಳಿದುಕೊಂಡ ಸಕ್ಕರೆ ಪಾಕ
ನಾಲಗೆಗೆ ಚುರುಕು ಮುಟ್ಟಿಸುತ್ತಿದ್ದಂತೆ
ಇಬ್ಬರೂ ನಕ್ಕು ಮುಗಿಸುತ್ತಾರೆ
ಎರಡೂ ಬಣದ ಮಂದಿಗೆ
ಲೊಟವ ಇಣುಕಿ ನೋಡುವ ಚಾಳಿ
ಒಬ್ಬ ಸಾರುತ್ತಾನೆ
"
ಸಂತರು ಸಕ್ಕರೆ ಪೋಳು ಮಾಡಿದ್ದಾರೆ"
ಮತ್ತೊಬ್ಬ
"
ಮಾತೆ ಸಕ್ಕರೆ ಬೆರೆಸದೆ ಮೋಸ ಮಾಡಿದ್ದಾರೆ"
ಇನ್ನೂ ಸಮಂಜಸವಲ್ಲದ ಕೂಗು
ಎರಡೂ ಬಣದಿಂದ
ಚಹ ತಯಾರಿಸಿ ಕೊಟ್ಟಿದ್ದವ
ಬೇನಾಮಿ, ಜಾತಿ-ಧರ್ಮದ ಹಂಗು ತೊರೆದವ
ಎಲ್ಲರಿಗೂ ಬೇಕಾದವ
ಆದರೂ ಯಾರಿಗೂ ಬೇಡವಾದವ;
ಅವ ದೇವರಲ್ಲ, ಸಹಜವಾಗಿ ತಪ್ಪು ಮಾಡಬಲ್ಲ
ವೃತ್ತದಿಂದ ದೂರುಳಿದು ಪರಿಶೀಲಿಸುವ
ಸಾಮಾನ್ಯರಲ್ಲಿ ಸಾಮಾನ್ಯ
ಇತ್ತ ಮೂಢರ ಕೆಸರೆರಚಾಟ
ಮಾತೆಯ ಸೆರಗಿಗೂ
ಸಂತನ ಕಾವಿಗೂ ಮಸಿ ಬಳಿದು
ಇಬ್ಬರನ್ನೂ ಆರೋಪದ ದಿಬ್ಬದ ಮೇಲೆ ನಿಲ್ಲಿಸಿತು
ಅಲ್ಲೂ ಮಾಸದ ನಗು
ಅದು ಒಬ್ಬರ ಮೇಲೊಬ್ಬರಿಗಿದ್ದ ಗೌರವದ ಸಂಕೇತ,
ಇದನರಿಯದ ಮತಿಗೇಡಿ ಬುದ್ಧಿ ವ್ಯಂಗ್ಯವಾಡುತ್ತ
ತಪ್ಪಿತಸ್ಥರೆನ್ನುತ್ತಲೇ ಸಾರುತ್ತಿತ್ತು
"Action speaks more than words"
ಅಲ್ಲಿ ಮೌನವೊಂದೇ ಸಮರ್ಥನೆಯಾಗಿತ್ತು!!

                                              -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...