Friday 20 February 2015

ಒರಟನ ಪದ್ಯ

ಹೋದ ಕಡೆಯಲ್ಲೆಲ್ಲ ಜೊತೆಗೊಂದು ಆಕಾಶ
ಮೋಡ ಎಲ್ಲೋ ದಣಿದು ಸುಮ್ಮನಾಯ್ತು
ಶೂನ್ಯಗಳ ಶುರುವಿಟ್ಟು ಅಲ್ಲೆಲ್ಲೋ ಒಂದಂಕಿ
ನಂತರಕೆ ಶೂನ್ಯವೂ ಕೊನೆಗೊಂಡಿತು

ಬೆನ್ನಿಗಾನಿಸಿಕೊಂಡ ತೇಪೆ ಚೀಲದ ತುಂಬ
ಪಡಪೋಸಿ ನೆನಪುಗಳ ಹೆಪ್ಪು ಗಡ್ಡೆ
ದೂರಕ್ಕೆ ತುದಿಗಂಡು ಚಲಿಸುವಂತಲ್ಲೆಲ್ಲ
ಮೋಸಕ್ಕೆ ಬಲಿಯಾಯ್ತು ಕಣ್ಣ ಗುಡ್ಡೆ

ಚುಚ್ಚಿದ ಮುಳ್ಳಿಗೂ ತುಸು ದೂರ ಪಯಣ
ಬಿಡಿಸಿಕೊಳ್ಳುವ ಮನಸು ಇಲ್ಲವಾಗಿ
ಒಂದಿಷ್ಟು ಅಂಡೂರಿ ಮರಳ ಬೆಚ್ಚಗೆ ಇರಿಸಿ
ಮುಟ್ಟಿಕೊಂಡೆ ಕೆನ್ನೆ ತುಂಬು ಮಾಗಿ

ಒಡೆದ ತುಟಿಯ ಒಂದು ಬಿರುಕಿನಿಂದ ಸ್ರಾವ
ಸವರಿದ ನಾಲಗೆಗೆ ತೀರ ಹಸಿವು
ಸೋತ ಕಿವಿಯಲಿ ಮತ್ತೆ-ಮತ್ತೆ ಕೇಳುವುದೊಂದೇ
ಸೋತವರ ಒಕ್ಕೊರಳ ಜೈಕಾರವು

ಕತ್ತಲಾಯಿತು ಆದರಿಲ್ಲ ನಿದ್ದೆಗೆ ಸಮಯ
ಕನಸುಗಳು ಕಣ್ಮುಚ್ಚಿ ಹೆಣವಾಗಿರೆ
ಎತ್ತ ಸಾಗಲಿ? ಅದುವೇ ಸ್ಪಷ್ಟವಿಲ್ಲದೆ ಹೋಗಿ
ಉಸಿರಾಟ ಮುಂದುವರಿಯಿತು ಆದರೆ

ನಿಂತರೆ ಕೊಳೆಯುವೆ, ನಡೆದರೆ ಸವೆಯುವೆ
ಮಾಡಲೆಂತೋ ಕಾಣೆ ಬದುಕು ಒಗಟು
ನಾಜೂಕು ಜನರೊಡನೆ ಒಡನಾಟದ ಬಯಕೆ
ಏನು ಮಾಡಲಿ ಸ್ವಾಮಿ ನಾನು ಒರಟು!!


-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...