Friday 20 February 2015

ಮುನಿದ ಸಂಜೆ


ಬಿದಿರ ಸಿಬಿರೊಂದು ತುಟಿಗೆ ಚುಚ್ಚಿ
ಕೊಳಲ ಮೇಲೆ ಕುಪಿತಗೊಂಡಾಗ
ಸತ್ತ ಸ್ವರವೊಂದು ಬಿದಿರುಗಾಡಿನಲ್ಲಿ
ಹಾವಿಯಂತೆ ಅಲೆದಾಡುತ್ತಿದೆ

ತಂತಿ ಮುರಿದು ಬೆರಳ ಕೊಯ್ದು
ಕೊನೆಯ ಬಾರಿ ಕಂಪಿಸಿದಾಗ
ಬಿಗಿದ ತುದಿಯ ದಡದ ಮೌನ
ಅನಾಥ ಭಾವದಲಿ ಬದುಕಿದೆ

ತೊಗಲು ಹರಿದ ಮೃದಂಗದಲ್ಲಿ
ತುಮುಲಗಳ ತಡಿಕಿತವು ತೊರೆದು
ತೂತು ಬಿದ್ದ ಘಟವು ತಾನು
ಬಿಕ್ಕಿ ಬಿರಿದು ಒಡೆದಿದೆ

ರಾಗ ಹೊರಡದ ಕೊರಳು ಒಂದೆಡೆ
ಶಾರದೆಯ ಜಪಗೈಯ್ಯುತಿರಲು
ತೂಕಡಿಸಿದ ಭಕ್ತಿಯಲ್ಲಿ
ಪದ್ಮ ಪುಷ್ಪವು ಬಾಡಿದೆ

ರಂಗು ಮಾಸಿದ ಇಂಥ ಸಂಜೆಯ
ಶಾಪವಿತ್ತ ನಿನ್ನ ಕಣ್ಣಿನ
ಕಾಡಿಗೆಯ ಕರಗುವಿಕೆಯಲ್ಲಿ
ನನ್ನ ಪ್ರಾಣ ಮರುಗಿದೆ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...