Friday 20 February 2015

ಚಂದನವನದಂಗಳದಲಿ


ಭಟ್ಟರೊಂದು ಹಾಡು ಗೀಚಿ
ಕೇಳ ಬಿಟ್ಟು ಸುಮ್ಮನಾದ್ರೆ
ಕೇಳಿದಂಥ ನಮ್ಮ ಪಾಡು
ಕೇಳೋರ್ಯಾರು ಸ್ವಾಮಿ

ಕಾಯ್ಕಿಣಿ ಬರೆದ ಸಾಲು
ಎದೆಗೆ ನಾಟಿಕೊಂಡ ಮೇಲೆ
ಗೆಳತಿಯ ಎಷ್ಟೇ ನೆನೆದರೂ
ನೆನೆದಷ್ಟೂ ಕಮ್ಮಿ

ಹೃದಯವನ್ನೇ ಹಿಂಡುವಂಥ
ಭಾವ ತೀವ್ರ ಪದ್ಯದಲ್ಲಿ
ಮುಳುಗಿಸೆಬ್ಬಿಸುತ್ತ ನಗುವ
ಶಿವನ ಸ್ಮರಿಸಬೇಕು

ಮತ್ತೆ ಮತ್ತೆ ಅದೇ ಪದದ
ಪುನರಾವರ್ತನೆ ಮಾಡುವ
ಕವಿಗಳಲ್ಲೇ ರಾಜನೆನಿಸಿದವರ
ಏನನಬೇಕು?

ಬರುತಲಿಲ್ಲ ನಾಗೇಂದ್ರರು
ಹೊಸತೇನನೂ ಹೊತ್ತು ಮತ್ತೆ
ಮತ್ತದೇ ಸಪ್ಪೆ ಸಾರು
ಹಳಸು ರಾಗಿ ಮುದ್ದೆ

ಹಂಸಲೇಖರಂತೂ
ಈಚೆಗೆಲ್ಲೂ ಕಾಣಸಿಗುತಲಿಲ್ಲ

ನಾದ ಬ್ರಹ್ಮ ಹೊಡೆಯಬಹುದೇ
ಪಾಟಿ ನಿದ್ದೆ

ಗೌಸು, ವಿಶ್ವ, ಬೋರಗಿ, ಅರಸು
ಅಂತಾರೆ ಆಗಾಗ
ತೀರ ಕಮ್ಮಿ ಆದ್ವು ಅವರ
ಪ್ರಯೋಗದ ಬಾಣ

ಹುಚ್ಚ, ಬಚ್ಚರೆಲ್ಲ ಈಗ
ಪೆನ್ನು ಹಿಡಿದು ಹೊರಟ ಮೇಲೆ
ಎಲ್ಲಿ ಉಳಿಯ ಬೇಕು ಹೇಳಿ
ಕೇಳುಗರ ಪ್ರಾಣ?

ಮರೆತೇ ಬಿಟ್ಟೆ ಕಲ್ಯಾಣರು
ಮಾಡುತಿಲ್ಲ ಯಾವ ಮೋಡಿ
ಮನೋಹರರ ಮೌನವಿನ್ನೂ
ಎಷ್ಟು ದೂರ ಕಾಣೆ

ಒಂದು ಎರಡು ಹಾಡು ಹೊಸೆದು
ಅವಕಾಶವಿಲ್ಲದವರು
ನೆನೆಯಲಿಕ್ಕೆ ನೆನಪಿನಲ್ಲಿ
ಉಳಿದಿದ್ದರೆ ತಾನೆ!!

ಹುಟ್ಟಿನಲ್ಲೇ ಹೊಸಕಿ ಬಿಟ್ಟು
ಇನ್ನು ಚಿಗುರುವಾಸೆ ಹೊತ್ತು
ಉಳಿದ ಹೊಸಬರಿಂದ ಬಂದ
ಹಾಡುಗಳೂ ಚಂದವೇ

ಕಂಡು ಜರಿವ ಬದಲು
ಕೊಂಡು ಸವಿದ ಮೇಲೆ ಹಣ್ಣ ರುಚಿಯು

ಕೊಂಚವಾದ್ರೂ ಇಷ್ಟವಾಗಿ
ಧನ್ಯವಾಗೋದಿಲ್ಲವೇ?!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...