Friday, 20 February 2015

ಎಲ್ಲಿಯೂ ನಿಲ್ಲದೆ

ದಾರಿ ಸ್ಥಾವರವಾಗಿದ್ದು
ಜಂಗಮದ ಪಾಠ ಕಲಿಸಿತು
ತೂಕಡಿಸುತ್ತಿದ್ದ ಮಂಡೂಕಕ್ಕೆ
ಕುಪ್ಪಳಿಸುವ ಹುರುಪು ತುಂಬಿ

ದಾಸಯ್ಯನ ಶಂಖ, ಜಾಗಟೆಯ ಸದ್ದು
ಊರಾಚೆ ಕೆರೆಗೆ ಕೇಳುತ್ತಲೇ
ತರಂಗಗಳ ಮೇಲೆ ನೀರ್ಗುಳ್ಳೆಗಳು ಸಾಗಿ
ದಡ ಮುಟ್ಟುತ್ತ ಒಡೆದು ಹೋದವು

ಇಳಿಜಾರಿಗೆ ಸಿಕ್ಕಿದ ಹಣ್ಣೆಲೆ
ಕಣಿವೆಯ ಕಾಲುವೆಯಲ್ಲಿ
ಕುಂಟು ಹೆಜ್ಜೆ ಇಕ್ಕುತ್ತಲೇ
ಪಾಚಿಗಟ್ಟಿ ಮತ್ತಾವುದೋ ಮರದ
ಬುಡಕೆ ಆಹಾರವಾಯಿತು

ಮುಗಿಲು ಕಡಲ ಬಸಿದು
ಹಸಿದ ನೆಲವ ಮುತ್ತಿಕ್ಕುವಾಗ
ಸತ್ತೇ ಹೋಗಿದ್ದ ಬೀಜಕ್ಕೆ
ಮತ್ತೊಮ್ಮೆ ಚಿಗುರುವ ಬಯಕೆ

ಮಸಿಯಿಂದ ಅಕ್ಷರ ರೂಪ ತಾಳಿ
ಮೂಡಿದ ಪದ ಗುಚ್ಚಕ್ಕೆ
ಸೋಲಗಿತ್ತಿ ಇಲ್ಲದ ಪ್ರಸವ
ಅರಳಿದ್ದು ಅನನ್ಯ ಭಾವ ಹೂವ!!

-- ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...